ಶನಿವಾರ, ಅಕ್ಟೋಬರ್ 19, 2019

ದೇವರನ್ನು ಕಾಡಿದ ಮನುಜನ ಮರ್ಕಟ ಮನಸ್ಸು



    ದ್ವಾಪರದಲ್ಲಿ ಕೃಷ್ಣ ದೇವರೆಂದು ತಿಳಿದಿದ್ದರೂ,ಕಂಸನ ಕೃಷ್ಣ ಕೊಂದ ಕೋಪದ ಪ್ರತಿಕಾರಕ್ಕೆ ಜರಾಸಂದ ದ್ವಾರಕದ ಮೇಲೆ ದಂಡೆತ್ತಿ ಬಂದಾಗ ಎರಡು ಆಯ್ಕೆ ದ್ವಾರಕ ರಾಜನಿಗೆ ನೀಡುತ್ತಾನೆ. ಅದೆಂದರೆ ಕೃಷ್ಣನನ್ನು ಕಳುಹಿಸಿದರೆ ದ್ವಾರಕ ನಾಶ ಮಾಡದೆ ಕೃಷ್ಣನನ್ನು ಮಾತ್ರ  ಸಂಹರಿಸಿ ತೆರಳುವುದು ಮತ್ತೊಂದು ಕೃಷ್ಣನನ್ನು ದ್ವಾರಕದಿಂದ ಒಪ್ಪಿಸದಿದ್ದರೆ ಇಡೀ ದ್ವಾರಕ ನಾಶ. ಇದನ್ನು ಕೇಳಿದ ರಾಜ ಕಂಗಲಾಗಿ ರಾಜ ಸಭೆ ಕರೆದು ಎಲ್ಲ ಹಿರಿಯೊತ್ತಮರ ಅಭಿಪ್ರಾಯ ಪಡೆದಾಗ ಎಲ್ಲರೂ ಕೃಷ್ಣನಿಗೋಸ್ಕರ ದ್ವಾರಕ ನಾಶ ಆಗೋದು ಬೇಡ. ಕೃಷ್ಣ ದೇವರು ತಾನೆ ಅವನನ್ನು ಅವನೇ ರಕ್ಷಿಸಿಕೊಳ್ಳಲಿ ಎಂದು ನಿರ್ಧಾರಕ್ಕೆ ಬರುತ್ತಾರೆ. ಕೃಷ್ಣ ಬಲರಾಮರಿಬ್ಬರೆ ಸೇರಿ ಜರಾಸಂದನ ಓಡಿಸುತ್ತಾರೆ. ಬಾಲ್ಯದಿಂದ ಮಾಡಿದ ಕೃಷ್ಣಲೀಲೆಯ ಮರೆತ ಜನ ಆ ಸಂದರ್ಭದಲ್ಲಿ ಮತ್ತೆ ಉಘೇ ಉಘೇ ಅಂದರು.
     ಕೌರವರ ರಾಜಸಭೆಯಲ್ಲಿ ಸಂಧಾನಕ್ಕೆಂದು ತೆರಳಿದ ಕೃಷ್ಣನ  ಮೌನಿಯಾದ ರಾಜ ಧೃತರಾಷ್ಟ್ರ ,ದೇವರೆಂದು  ಪೂಜಿಸಿದ ಬೀಷ್ಮ ದ್ರೋಣರೆದುರೆ  ಖಂಡಾತುಂಡವಾಗಿ ನಿಂದಿಸಿದ ದುರ್ಯೋಧನನ ಆಜ್ಞೆಯಂತೆ ಬಂಧಿಸಲು ಕೌರವ ಮಂತ್ರಿಗಳು ಮುಂದೆ ಬಂದಾಗ ವಿಷ್ಣು ರೂಪಾ ತಾಳಿದಾಗಲೂ ಭಗವಂತನೆಂದು ತಿಳಿಯದ ಮೌಢ್ಯ.
        ಇಂದ್ರಪ್ರಸ್ಥದಲ್ಲಿ ಧರ್ಮರಾಯನಿಗೆ ಪಟ್ಟಾಭಿಷೇಕ ನಡೆಯುವಾಗ ಮೊದಲ ಪೂಜೆ ಕೃಷ್ಣನಿಗೆ ನೀಡಲಾಗುತ್ತದೆ.ಇದನ್ನು ವಿರೋಧಿಸಿ ಶಿಶುಪಾಲ ನೀಚ,ಕಾಮುಕ,ತಂದೆ ತಿಳಿಯದವ, ನೀಚ ಕುಲದ ಗೋಪಾಲಕನೆಂದು ನೂರು ಶಬ್ದಗಳನ್ನು ಮೀರಿ ದಾಟಿದಾಗ ಕೃಷ್ಣನೆ ವಧೆ ಮಾಡಬೇಕಾಯಿತು. ನೂರು ಶಬ್ದಗಳವರೆಗೆ ಕೊಲ್ಲುವುದಿಲ್ಲವೆಂದು ಶಿಶುಪಾಲನ ತಾಯಿಗೆ ನೀಡಿದ ವಾಗ್ದಾನ ಮುಗಿಯುವವರೆಗೆ ಕಾಯಬೇಕಾಯಿತು.
         ಕೃಷ್ಣ ಭಗವಂತನೆಂದು ಕೌರವನು ತಿಳಿದರೂ ಕೂಡ ಅವನ ಸೈನ್ಯವೇ ಸಾಕು ನಮ ಪಾಲಿಗೆ. ಕೃಷ್ಣ ಒಬ್ಬ ಮಾತ್ರ ಪಾಂಡವರಿಗೆ ಇರಲಿ ಎಂದು ಸಾಮಾನ್ಯನಂತೆ ಕೃಷ್ಣನನ್ನು ನಡೆಸಿಕೊಂಡನು.
      ಕರ್ಣ ನಿನ್ನ ಸಹೋದರರ ಕೈಯಲ್ಲಿ ನೀನು ಸಾಯಬೇಡ ನೀನು ಕುಂತಿ ಮಗನೆ ಎಂಬ ಸತ್ಯ ಹೇಳಿದಾಗಲೂ ನಾಳೆ ನಡೆಯುವ ಯುದ್ಧವನ್ನು ತಡೆಯುವ ಉದ್ದೇಶದಿಂದ ಬಂದಿರುವೆ ಎಂದು ಕೊನೆ ಮಾತುಕತೆವರೆಗೆ ಕೃಷ್ಣನ ನಂಬುವುದಿಲ್ಲ ಕರ್ಣ. ಕುಂತಿಯನ್ನೇ ಹೋಗಿ ಕೇಳುವವರೆಗೆ ಕರ್ಣನಿಗೆ ನಂಬಿಕೆ ಹುಟ್ಟಲಿಲ್ಲ.
         ಧರ್ಮದ ಮಾರ್ಗದ ಎದುರು ಅಧರ್ಮದ ಗೆಲುವಿಗಾಗಿ ಯುದ್ಧಕ್ಕೆ ನಿಂತವರು ಅಧರ್ಮಿಗಳು ಕೊಂದು ಬಿಡು ಎಂದಾಗ ಕೃಷ್ಣನ ಮಾತನ್ನು ಯುದ್ಧರಂಗದಲ್ಲಿ ಅರ್ಜುನ ಸಂಬಂಧಿಕರು, ಗುರುಗಳು ಎಂದು ನಿರಾಕರಿಸುತ್ತಾನೆ. ಕೃಷ್ಣನ ಬೋಧನೆ ನಂತರ ಅರ್ಜುನ ಎಚ್ಚೆತ್ತುಕೊಳ್ಳುತ್ತಾನೆ.
       ತನ್ನ ಮಕ್ಕಳಾದ ಪಂಚ ಪಾಂಡವರನ್ನು ಕೊಂದ ಕೋಪದಲ್ಲಿ ಕೃಷ್ಣನ ಮಾತನ್ನು ದಿಕ್ಕರಿಸಿ, ಅಶ್ವತ್ತಾಮನ ಕೊಲ್ಲಲು ಪಾಂಡವರನ್ನು ದ್ರೌಪದಿ ಕಳುಹಿಸುತ್ತಾಳೆ. ಪಾಂಡವರ ಸಾವನ್ನು ತಪ್ಪಿಸಲು ಹಿಂದೆ ತನ್ನ ರಥವನ್ನು ಸಾಗಿಸಿ ಶಿವನ ಅಂಶವಾದ ಅಶ್ವತ್ತಾಮನು ಅಧರ್ಮದ ಸೇಡಿಗಾಗಿ ಬಳಸಿದ ಬ್ರಹ್ಮಾಸ್ತ್ರವನ್ನು ಬ್ರಹ್ಮ ದೇವರ ಪ್ರಾರ್ಥನೆಯೊಂದಿಗೆ ಹಿಂದಕ್ಕೆ ಪಡೆಯುವಂತೆ ಕೃಷ್ಣ  ಮಾಡುತ್ತಾನೆ.

      ಕೃಷ್ಣ ತಾನು ಭಗವಂತ ಎಂದು ಗೊತ್ತಿದ್ದರೂ ದ್ವಾಪರದಲ್ಲಿ ಮನುಷ್ಯ ಆತನ ಲೀಲೆಗಳನ್ನು ಮಾತ್ರ ಮೆಚ್ಚಿದ ಹೊರತು ತನ್ನ ಮನಸ್ಸಿನ ಮರ್ಕಟ ಬುದ್ಧಿಯಿಂದಲೇ ಕೃಷ್ಣನ ಆಪಾದಿಸಿದರು, ಆತನ ಮಾತನ್ನು ನಿರಾಕರಿಸಿದರು.ಕೃಷ್ಣ ಸಾಮಾನ್ಯನಂತೆ ಎಲ್ಲವನು ಅನುಭವಿಸಿದ ಜೊತೆಗೆ ತಾನೆ ಅದಕ್ಕೆ ಪರಿಹಾರ ಕಂಡುಕೊಂಡನು. ಒಂದುವೇಳೆ ಅದೇ ಭಗವಂತ ಕಲಿಯುಗದಲ್ಲಿ ಜನಿಸಿದರೆ ಅಂದು ನೂರು ಇವತ್ತು ಲಕ್ಷಾಂತರ ಮಂದಿಯ ಆಪಾದನೆಗಳನ್ನು ಎದುರಿಸಬೇಕಾದಿತು. ಭಜನೆ, ಪೂಜೆ, ಹೋಮ, ಹವನ ಮಾಡಿಸುವವರು, ಮಾಡದವರು, ನಂಬದವರು , ನಂಬುವವರು ಹಾಗೂ ದೇವಸ್ಥಾನಗಳನ್ನು ಬಂಗಾರದಿಂದ ತುಂಬುವವರು ಕೃಷ್ಣ ಎದುರು ಬಂದರೂ, ನಾನೇ ದೇವರೆಂದರೂ ದ್ವಾಪರದಲ್ಲಿ ಬಿಡದ ಮನುಷ್ಯ ಕಲಿಯುಗದಲ್ಲಿ ಬಿಡುವನೆ!..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ