ಬುಧವಾರ, ನವೆಂಬರ್ 23, 2022

ಹರಿವ ನೀರ ತಡೆದಿಟ್ಟ ಮನುಜ
ತನುವ ಪೋಷಣೆಗಿಟ್ಟ ಈ ಜೀವಜಲವನು
ಬೆಟ್ಟ ಕೊರೆದು ಬಗೆದ ಖನಿಜ 
ಸೌಂದರ್ಯ ಜೀವನಕ್ಕಾಗಿ ಪಡೆದನು

ಹಾಗಾದರೆ ಪರಿಸರದ ಸೃಷ್ಟಿ ಯಾಕಾಯಿತು? ... ಎಂದರೆ ಇವನೆಂದ 'ಇದೆಲ್ಲವೂ ತನಗಾಗಿ ತನ್ನ ಹಿತಕ್ಕಾಗಿ.. ತನ್ನ ಸುಖಕ್ಕಾಗಿ'...
ಹಾಗಾದರೆ ಬದುಕು ಮತ್ತು ಪರಿಸರ ಸಂಬಂಧ ಇಷ್ಟೇನಾ..!? ಪರಿಸರದಿಂದ ಬದುಕು ಹೊರತು ಬದುಕಿಗಾಗಿ ಪರಿಸರವೇ..? ಪರಿಸರ ಎಂದರೆ ಕೇವಲ ಹಸಿರು ಮಾತ್ರಾನ..? ಪ್ರಾಣಿ ಮತ್ತು ಜಂತುಗಳಲ್ಲಿ ಮನುಷ್ಯ ಇಲ್ಲವೇ..?!🙄

 ಒಟ್ಟಿನಲ್ಲಿ ಮಳೆ ಬಂದು ಇಳೆ ತಂಪಾದಾಗ ಆಹಾರ, ಧಾನ್ಯ ಜೊತೆಗೆ ಸ್ನಾನ ಹಾಗೂ ಬಾಯಾರಿಕೆಗಾಗಿ ನೆಲ ಜಲವ ಪಡೆದ.. ಇದು ವಾಸ್ತವ ಮತ್ತು ಬಳಕೆಯ ನುಡಿ.
ತನ್ನ ಮನದ ತಂಪಿಗಾಗಿ ಪರಿಸರವನು ಮನಬಂದಂತೆ ಕೆತ್ತಿದನು, ಮೆತ್ತಿದನು ಅಲ್ಲೇ ಜೀವನ ಕಳೆದನು.. ಕಳೆಯದಿದ್ದವನು ಸಮಯದ ಮುಳ್ಳಿನ ಜೊತೆ ಸುಖವನ್ನು ಅಲ್ಲೇ ಹುಡುಕ ತೊಡಗಿದನು.. ಉಗಿದನು, ಉರುಳಿದನು, ಕೊಂದನು,  ತಿಂದನು, ಬೀಸಾಕಿದನು ಮತ್ತೆ ಅಲ್ಲೇ ತನ್ನೆಲ್ಲ ನೋವನ್ನು ಬಿಟ್ಟು ಅದರ ಖುಷಿಯನ್ನು ನುಂಗಿದನು...

        ಇನ್ನು ತನ್ನ ಅನುಕೂಲ ಮತ್ತು ಸೌಂದರ್ಯ ಜೀವನಕ್ಕಾಗಿ ಪರಿಸರವನ್ನು ಒಡೆದ, ಬಗೆದ ಸಿಕ್ಕವುಗಳೆಲ್ಲ ತನಗಾಗೆ ಎಂದು ಭಾವಿಸಿದ...! ಅಷ್ಟಕ್ಕೇ ಸುಮ್ಮನಿರುವನೇ.. ತನುವಿನ ಸೌಂದರ್ಯಕ್ಕೂ ಇದರ ನಾಶದಿಂದ ಸಿಗುವ ವಸ್ತುಗಳೇ ಸಾಕೆಂದ...!
ಹಾಗಾದರೆ ಮನುಷ್ಯನಿಗೆ ಬದುಕಲು ಬೇಕಾದ ಸಹಜ ಆಹಾರ, ಸಹಜ ಸೌಂದರ್ಯ, ಸಹಜ ವಾತಾವರಣ, ಗಾಳಿ, ಸಹಜ ಪ್ರಾಣಿಗಳ ಸಂಬಂಧ ಯಾಕೆ ಬೇಡವಾಯಿತು..!? ಎಲ್ಲವು ಹೈಬ್ರಿಡ್ ಎಂಬ ಹಣೆಪಟ್ಟಿಯಲ್ಲೇ ಪರಿಸರದ ಮೇಲಿನ ಅತ್ಯಾಚಾರಗಳು, ಪ್ರಾಣಿ ಮತ್ತು ಸಸ್ಯಗಳ ಮೇಲಿನ ಪ್ರಯೋಗಗಳು ಮನುಷ್ಯನ ಅವನತಿಯನ್ನು ಬಯಸಲಾರವೇ..?
ಹಾಗಾದರೆ ಈ ಪರಿಸರದ ಪ್ರೇರಣೆಯಿಂದಲೇ ಮನುಷ್ಯನ ವರ್ತನೆಗಳಲ್ಲಿ ಕೆಲವೊಂದು ಬದಲಾವಣೆಗಳಾಗಿವೆಯೇ..?
ಮನುಷ್ಯನಲ್ಲೇ ಕೆಲವೊಂದು ಸ್ವನಾಶ ಪ್ರವೃತ್ತಿ ಹೆಚ್ಚಾಗಳು ಈ ಪ್ರಕೃತಿಯ ಭಾವದ ಏರುಪೇರಲ್ಲಾದ ಸೂಚನೆಗಳೇ.. ಕೋಪ, ಉದ್ರೇಕ, ಅಸಹನೆ, ಅಸ್ಮಿತೆಯ ಮೌಡ್ಯ, ಮತಾಂಧತೆ, ರೋಗ, ಕುಗ್ಗುವಿಕೆ, ತುಲನೆ, ಲಾಲಾಸೆ, ಲಾಭ, ಅಪವಾದ, ಅನ್ಯಾಯ, ಒತ್ತಡ, ಹಿಂಸೆ ಇತ್ಯಾದಿಗಳು..!

ಎಲ್ಲ ಪ್ರಶ್ನೆಗಳಿಗೂ ಉತ್ತರ ಮತ್ತು ಉತ್ತರದಾಯಿತ್ವ ಕೇವಲ ಮನುಷ್ಯನ ಬದುಕುವ ಶೈಲಿಯೇ ಕೊಡಬೇಕೇನೋ.. ಚಲಿಸೋಣ ಅಸ್ತಿತ್ವ ರಹಿತ ಅಸ್ಮಿತೆ ಮತ್ತು ಆಸೆಯ ಸುಖದ ಅಭಿವೃದ್ಧಿಯ ಜೀವನದ ಕಡೆಗೆ.. ಶುಭವಾಗಲಿ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ